ನಮ್ಮ ಬಗ್ಗೆ

ಸಂಕಥನವು ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನಗಳಲ್ಲಿ ಕಲಿಯುತ್ತಿರುವ, ದುಡಿಯುತ್ತಿರುವ ಗ್ರಾಮೀಣ ಸೃಜನಶೀಲ ಯುವ ಸಮುದಾಯ . ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಪರಿಸರ, ಕೃಷಿಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ, ಸಂವಾದ, ಕೃತಿ ಪ್ರಕಟಣೆ – ಪ್ರಸರಣ, ವಿಶೇಷವಾಗಿ ಗಾಂಧಿ – ಅಂಬೇಡ್ಕರ್ ಚಿಂತನೆ.. ಕಳೆದುಹೋಗುತ್ತಿರುವ ನೆಲಮೂಲ ಸಂಸ್ಕೃತಿಯ ಕುರಿತು ಅರಿವು, ಅಧ್ಯಯನ ಇದರ ಮೂಲ ಭೂಮಿಕೆ.
೨೦೦೫ ರಲ್ಲಿ ಮಂಡ್ಯದಲ್ಲಿ ‘ಸೃಜನ’ ಹೆಸರಿನಲ್ಲಿ ಶುರುವಾದ ಸಮೂಹವು ‘ಅನೇಕ’ವಾಗಿ ಕಡೆಗೆ ೨೦೧೫ರಲ್ಲಿ ಬೆಂಗಳೂರಿನಲ್ಲಿ ‘ಸಂಕಥನ’ ವಾಯಿತು. ಇವಾಗ ಸಂಕಥನವು ಒಂದೆರಡು ಊರಿನ ಜನರ ಸಮೂಹವಾಗಿಲ್ಲ. ಅಂತರ್ಜಾಲ ತಾಣದಲ್ಲಿ ಹಲವು ಊರುಗಳ, ಹಲವು ಜನಗಳ, ಹಲವು ಓದುಗಳ ಸಮೂಹವಾಗಿ ಬೆಳೆದಿದೆ.

ಸಂಕಥನ ಪ್ರಣಾಳಿಕೆ ೨೦೨೧

  • ಕಂದರಿಗೆ ಕನ್ನಡ ; ಐದು ರುಪಾಯಿ ಪುಸ್ತಕ ಮಾಲೆ
     ನರ್ಸರಿ ಇಂದ ೮ ನೇ ತರಗತಿ ವರೆಗಿನ ಮಕ್ಕಳನ್ನು ಗಮನದಲ್ಲಿ ಇಟ್ಟುಕೊಂಡು ಇತಿಹಾಸ, ವಿಜ್ಞಾನ, ಗಣಿತ, ಸಾಹಿತ್ಯ, ವ್ಯಕ್ತಿಚಿತ್ರ, ಪಾಕ ಮತ್ತು ತತ್ತ್ವಶಾಸ್ತ್ರ‌ ಇನ್ನಿತರ ವಿಚಾರ ಕುರಿತಂತೆ ಪುಟ್ಟ ಪುಸ್ತಕಗಳ ಪ್ರಕಟನೆ ಮತ್ತು ಕೇವಲ ಐದು ರೂಪಾಯಿಗೆ ಮಾರಾಟ.
  • ವಿಚಾರ ಕನ್ನಡ : ಸೃಜನೇತರ ಸಾಹಿತ್ಯದ ಪ್ರಕಟಣೆಗೆ ಹೆಚ್ಚು ಒತ್ತು
     ಕಾವ್ಯ, ಕಥನಗಳಿಗಿಂತ‌ ಹೆಚ್ಚು ಸೃಜನೇತರ ಬರವಣಿಗೆಗೆ ಒತ್ತು ಕೊಟ್ಟು ವೈವಿಧ್ಯಮಯ ಬರಹಗಳ ಪುಸ್ತಕಗಳನ್ನು ಪ್ರಕಟಿಸುವುದು ಈ ವರ್ಷದ ಉದ್ದೇಶವಾಗಿದೆ. 10+ ವಿಶೇಷ ಪುಸ್ತಕಗಳು ಈ ಸರಣಿಯಲ್ಲಿ ಸಿದ್ದವಾಗುತ್ತಿವೆ. ಕನ್ನಡ ನಾಡು – ನುಡಿಯ ಚಿಂತನೆ, ಶಾಸನಗಳ ಅಧ್ಯಯನ, ಸ್ತ್ರೀವಾದಿ ಅಧ್ಯಯನ, ಕೃಷಿ ವಿಚಾರ ಸರಣಿಯ ಪುಸ್ತಕಗಳು. 
  • ಸಂವಾದ ಸಂಕಥನ :
     ಕಲೆ ,ಸಾಹಿತ್ಯ, ಸಂಸ್ಕೃತಿ, ಸಂಗೀತ, ಪರಿಸರ, ರಾಜಕೀಯ ಪ್ರಜ್ಞೆ ಸೇರಿದಂತೆ ಹಲವು ವಿಷಯಗಳ ಮೇಲೆ ಕೇಂದ್ರೀಕೃತವಾದ ಹಿರಿಯರು-ಕಿರಿಯರು ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುವ, ಚರ್ಚೆ ನಡೆಸುವ ಒಂದು ಅನೌಪಚಾರಿಕ ಕಾರ್ಯಕ್ರಮವಾಗಿದೆ. ೨೦೧೯ ರಲ್ಲಿ ೬ ಮತ್ತು ೨೦೨೦ ರಲ್ಲಿ ೧ – ಕಾರ್ಯಕ್ರಮಗಳು ನಡೆದಿವೆ. ಸಾಧ್ಯವಾದರೆ ಬೆಂಗಳೂರಿನಾಚೆಗೂ ರಾಜ್ಯದ ಬೇರೆ ಬೇರೆ ಕಡೆಗೆ ವಿಸ್ತರಿಸುವ ಉತ್ಸಾಹವು ನಮ್ಮಲ್ಲಿದೆ. ಹೊರಗಡೆ ಸಿಕ್ಕುವ ಸಹಾಯ/ಸಹಕಾರಗಳ ಮೇಲೆ ಅವಲಂಬಿತವಾಗಿದೆ.‌
     ಇಲ್ಲಿ ಪುಸ್ತಕ ಮಾರಾಟ – ಕಲಾ ಪ್ರದರ್ಶನಗಳು ಕೂಡ ನಡೆಯಲಿವೆ. 
  • ನವಯಾನ : ಅಂಬೇಡ್ಕರ್ ಚಿಂತನೆಗಳ ಅಭಿಯಾನ
     ಈ ದೆಸೆಯಲ್ಲಿ ಸಂವಾದ, ಕಿರು ಸಂದರ್ಶನಗಳು, ಸಾಕ್ಷ್ಯ ಚಿತ್ರ ಪ್ರದರ್ಶನಗಳು ನಡೆಯಲಿವೆ. ಸಂವಿಧಾನ, ಸಂಸತ್ತು, ಸ್ವಾಯತ್ತತೆ ಕುರಿತಂತೆ ಸಣ್ಣ ಹೊತ್ತಗೆಗಳು ಪ್ರಕಟನೆ. 
  • ಸ್ಮಾರಕ ಉಪನ್ಯಾಸ ಮಾಲೆ :
     – ಡಿ.ಆರ್ ನಾಗರಾಜರ ನೆನಪಿನ ಉಪನ್ಯಾಸ
     – ಶಂಬಾ ನೆನೆಪಿನ ಉಪನ್ಯಾಸ ( ಕನ್ನಡ ನುಡಿ ಕೇಂದ್ರಿತ ) 
  • ಸಂಕಥನ ಸಾಹಿತ್ಯ ತ್ರೈಮಾಸಿಕ : – ೨೦೨೧ ರಿಂದ ಸಂಕಥನ ಸಾಹಿತ್ಯ ಪತ್ರಿಕೆ ಮತ್ತೆ ಶುರುವಾಗುತ್ತಲಿದೆ. ಸಧ್ಯಕ್ಕೆ ಮುದ್ರಿತ ಪ್ರತಿ ಬದಲು e-ಪುಸ್ತಕವಾಗಿ ಮಾತ್ರ ಲಭ್ಯವಾಗಲಿದೆ. ಪ್ರಯೋಗತ್ಮಕವಾದ ಸೃಜನಶೀಲ ಬರಹಗಳಿಗೆ ಮತ್ತು ಹೆಚ್ಚು ವಿಚಾರ ಬರಹಗಳಿಗೆ ನಮ್ಮ ಪ್ರಾಶಸ್ತ್ಯ. – ಮುದ್ರಣದ ಅಗತ್ಯ ಇಲ್ಲದಿರುವುದರಿಂದ ಬಂಡವಾಳ ಮತ್ತು ನಷ್ಟದ ಭಯವಿಲ್ಲ. ಆದರೆ ಇದು ಮಧ್ಯದಲ್ಲಿ ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂಬ ಉದ್ದೇಶದಿಂದ ಸಂಪಾದಕ ಮಂಡಳಿ ಈಗಾಗಲೇ ಕೆಲಸ ಮಾಡುತ್ತಿದೆ. 
  • ಅಧ್ಯಾತ್ಮ ಪ್ರಜ್ಞೆ ಮತ್ತು ವೈಚಾರಿಕತೆಯನ್ನು ಮುಖ್ಯವಾಗಿರಿಸಿಕೊಂಡು ಪರಂಪರೆಯ ಜೊತೆಗೆ ಮುಖಾಮುಖಿಯಾಗುವ ಹಲವು ಭಿನ್ನ ಮಾರ್ಗ-ಪಂಥಗಳ ಜೊತೆಗೆ ಒಡನಾಡುವ ಅವಕಾಶವನ್ನು ಶಿಬಿರಗಳನ್ನು ಏರ್ಪಡಿಸುವ ಮೂಲಕ ಸಂಕಥನದ ಗೆಳೆಯರಿಗೆ ಒದಗಿಸಲಿದೆ. 
  • ಪರಿಸರವು ನಮ್ಮ ಮುಖ್ಯ ಕಾಳಜಿಗಳಲ್ಲೊಂದು.
     ಹವಾಮಾನ ಬದಲಾವಣೆ, ಮಾಲಿನ್ಯ, ನೀರಿನ ಸದ್ಬಳಕೆ, ನೈಸರ್ಗಿಕ ಕೃಷಿ, ಹಲವು ಉಪಕಸುಬುಗಳ ಪರಿಚಯ, ಕುರಿತಂತೆಯು ಕಾರ್ಯಕ್ರಮಗಳನ್ನು ಏರ್ಪಡಿಸುವುದಿದೆ. ಹಾಗೆಯೆ ಇದೇ ನೆವದಲ್ಲಿ ಐತಿಹಾಸಿಕ ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ಚಾರಣಗಳನ್ನು ಕೂಡ ನಡೆಸಲಿದೆ.